ಮನುಷ್ಯ ಜೀವನವೇ ಹಾಗೆ. ಸುಖವನ್ನು ಬಯಸುವಂಥದ್ದು. ಅಷ್ಟೇ ಅಲ್ಲ, ಜಿಜ್ಞಾಸೆಯಿಂದಲೇ ಕಾಲ ತಳ್ಳುವ ಜೀವನವದು. ತನ್ನ ಜಾತಕದಲ್ಲಿ ಕಷ್ಟ-ಸುಖ, ಶುಭ- ಅಶುಭಗಳ ಹಿಂದಿರುವ ರಹಸ್ಯ ಹುಡುಕಿಕೊಂಡು ಹೋಗುವ ಮನೋಧರ್ಮ ಕೆಲವರದಾದರೆ, ತನಗೆ ಬಂದ ಕಷ್ಟದ ಮೂಲ ಹುಡುಕಿಕೊಂಡು ಹೋಗಿ ಪರಿಹಾರ ಪಡೆಯಲು ಹವಣಿಸುವುದು ಹಲವರ ಮಾನವ ಸಹಜ ಗುಣ. ಕಷ್ಟ ಪರಿಹರಿಸಿ ಸುಖ ನೆಲೆಯಾಗಲು ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ದಾರಿ ಕಾಣದೆ ಕಂಗಾಲಾಗುವವರೂ ಅನೇಕರು.
ಬಹುತೇಕರು ಸಾಡೇಸಾತ್ ಶನಿಗೆ ಹೆದರಿದರೆ ಇನ್ನೂ ಅನೇಕರು ತಮ್ಮ ಜಾತಕದಲ್ಲಿ ತಮಗೆ ಕಾಳಸರ್ಪ ಯೋಗವಿದೆಯೆಂದು ತಿಳಿದು ಭಯಭೀತರಾಗುತ್ತಾರೆ. ಕಾಳ ಸರ್ಪ ಯೋಗದ ಬಗ್ಗೆ ಜನರಲ್ಲಿ ಭಯವಿರುವ ಜೊತೆಗೇ ಸಾಕಷ್ಟು ತಪ್ಪುತಿಳುವಳಿಕೆಗಳೂ ಇವೆ. ಹಾಗಾಗಿ ಕಾಳಸರ್ಪ ಯೋಗದ ಬಗ್ಗೆ ಹಾಗೂ ಪರಿಹಾರ ಉಪಾಯಗಳ ಬಗ್ಗೆ ಈ ಲೇಖನದ ಮೂಲಕ ಬೆಳಕು ಚೆಲ್ಲುವ ಪ್ರಯತ್ನ.
ಒಂದೇ ಪರಿವಾರದಲ್ಲಿ ಅಣ್ಣತಮ್ಮಂದಿರು ಅಕ್ಕತಮ್ಮಂದಿರು ಇರುತ್ತಾರೆ. ನಾವು ಒಂದೇ ಕುಟುಂಬದವರೆಂದು ಅಣ್ಣ ತಮ್ಮ ಅಕ್ಕ ತಂಗಿಯರೆಂದು ಹೇಳಿಕೊಂಡರೂ ಅವರೆಲ್ಲರಲ್ಲೂ ವ್ಯತ್ಯಾಸಗಳಿದ್ದೇ ಇರುತ್ತದೆ. ಅಭಿರುಚಿ, ರೀತಿ ನೀತಿ, ಭಾವನೆ ಎಲ್ಲವೂ ಭಿನ್ನ ಭಿನ್ನವಾಗಿರುತ್ತದೆ. ಅವರವರ ಕರ್ಮವನ್ನವಲಂಬಿಸಿಕೊಂಡು ಅವರವರ ಜೀವನಕ್ರಮ, ಆಸಕ್ತಿ ಭಿನ್ನವಾಗಿರುತ್ತದೆ. ಹಾಗಾಗಿಯೇ ಅವರವರ ಕರ್ಮಕ್ಕನುಗುಣವಾಗಿ ಫಲವಾದ ಭೋಗವೂ ಕೂಡಾ ಭಿನ್ನಭಿನ್ನವೇ.
ಇದನ್ನೇ ಇಲ್ಲಿ ಉದಾಹರಣೆಯಾಗಿಟ್ಟುಕೊಂಡು ನೋಡಿದರೆ, ಕದ್ರು ಹಾಗೂ ಕ್ರೋಧವಶಾ (ಸುರಸೆ) ಇಬ್ಬರು ಅಕ್ಕತಂಗಿಯರಾದರೂ, ಕದ್ರುವಿನ ಹೊಟ್ಟೆಯಲ್ಲಿ ನಾಗಗಳೂ, ಕ್ರೋಧವಶಾಳ ಹೊಟ್ಟೆಯಲ್ಲಿ ಸರ್ಪಗಳೂ ಹುಟ್ಟಿದವು. ನಾಗ ಹಾಗೂ ಸರ್ಪಗಳ ದೇಹ ಒಂದೇ ತೆರನಾಗಿ ಕಂಡರೂ, ಕರ್ಮ ಫಲವಾಗಿ ಗುಣಸ್ವಬಾವ ಬೇರೆ ಬೇರೆಯೇ. ಶಾಸ್ತ್ರಗಳ ಪ್ರಕಾರ, ಜಾತಕದ ಕುಂಡಲಿಯಲ್ಲಿ ಸರ್ಪಗಳ ಯೋಗ ನಿರ್ಧಾರಿತವಾದರೂ, ನಾಗಗಳ ಯೋಗ ನಿರ್ಧಾರಿತವಾಗಿಲ್ಲ.ಹಾಗಾಗಿ ಕುಂಡಲಿಯಲ್ಲಿ ಕಾಳಸರ್ಪಯೋಗ ಎಂದೇ ಹೇಳುತ್ತೇವೆಯೇ ವಿನಃ ನಾಗದೋಷ ಯೋಗವೆಂದು ಹೇಳುವುದಿಲ್ಲ ಎನ್ನುತ್ತಾರೆ ಜ್ಯೋತಿಷಿಗಳು.ನಿಮ್ಮ ಜಾತಕದಲ್ಲಿ ಕಾಳಸರ್ಪಯೋಗವಿದೆಯೆಂದಾದರೆ ಭಯಪಡಬೇಕಾಗಿಲ್ಲ. ಪ್ರತಿದಿನ ಭಗವಂತನ ಆರಾಧನೆಯಿಂದ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು. ಕಾಳಸರ್ಪ ಯೋಗದಿಂದ ಎದುರಾದ ಕಷ್ಟಗಳನ್ನು ನಿವಾರಿಸಲು ಹಾಗೂ ಮುಂದೆ ಬರಬಹುದಾದ ಕಷ್ಟಗಳ ಪರಿಹಾರಕ್ಕೆ ಮನೆಯಲ್ಲೇ ಮಾಡುವ ಪರಿಹಾರೋಪಾಯಗಳು ಮುಂದಿನ ಪುಟದಲ್ಲಿ ಓದಿ .