ಆರ್ಥಿಕ ಹಿಂಜರಿತ, ತತ್ಪರಿಣಾಮವಾಗಿ ಉದ್ಯೋಗ ಕಡಿತ ವೇತನ ಕಟ್ ಇತ್ಯಾದಿಗಳಿಂದಾಗಿ ಭವಿಷ್ಯದ ಬಗ್ಗೆ ಚಿಂತಿತರಾಗಿರುವವರ ಸಮುದಾಯ ಹೆಚ್ಚಾಗುತ್ತಿದೆ. ಆತಂಕ, ದುಗುಡ ಮನೆಮಾಡಿವೆ. ಈ ಹಿನ್ನೆಲೆಯಲ್ಲಿ ಹೊಸ ವರ್ಷ ತಮ್ಮ ಪಾಲಿಗೆ ನವಚೇತನ ನೀಡಬಹುದೇ ಎಂಬ ಆತಂಕದಲ್ಲಿರುವವರು ಜ್ಯೋತಿಷಿಗಳು, ಭವಿಷ್ಯ ನುಡಿಯುವವರ ಮೊರೆ ಹೋಗುತ್ತಿದ್ದಾರೆ. ಇದರೊಂದಿಗೆ ವೆಬ್ಸೈಟುಗಳಲ್ಲಿಯೂ ಜ್ಯೋತಿಷ್ಯ ಸೇವೆ ನೀಡುವ ಸೈಟುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಸಾಮಾನ್ಯವಾಗಿ ವರ್ಷಾಂತ್ಯದಲ್ಲಿ, ಮುಂದಿನ ವರ್ಷ ನಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿದುಕೊಳ್ಳುವವರ ಸಂಖ್ಯೆ ಹೆಚ್ಚಾಗುವುದು ಸಹಜ. ಆದರೆ ದುರಂತಮಯವಾಗಿಯೇ ಅಂತ್ಯ ಕಂಡ 2008 ಕೊನೆಗೊಳ್ಳುತ್ತಿರುವಾಗ ಜ್ಯೋತಿಷ್ಯ ಸೇವೆಗಳ ಮೇಲಿನ ಆಸಕ್ತಿ ದುಪ್ಪಟ್ಟಾಗಿದೆ. ಜಾಗತಿಕ ಹಣಕಾಸು ಹಿಂಜರಿತದಿಂದಾಗಿ ಉದ್ಯೋಗದ ಅಭದ್ರತೆಯ ಭಾವನೆ ಅಧಿಕವಾಗಿರುವುದೇ ಇದಕ್ಕೆ ಕಾರಣ.
'ನಮ್ಮನ್ನು ಸಂದರ್ಶಿಸುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಆರ್ಥಿಕ ಬಿಕ್ಕಟ್ಟು ಮತ್ತು ಮಾಧ್ಯಮಗಳ ಭರ್ಜರಿ ಕವರೇಜ್ಗಳಿಂದಾಗಿ ಸಾಕಷ್ಟು ಮಂದಿ ನಮ್ಮಲ್ಲಿಗೆ ಸಲಹೆ ಕೇಳಿ ಬರುತ್ತಿದ್ದಾರೆ' ಎಂದು ಜ್ಯೋತಿಷ್ಯ ಸೇವೆ ನೀಡುತ್ತಿರುವ ಆಸ್ಟ್ರೋಯೋಗಿ ವೆಬ್ಸೈಟ್ ಮಾಲೀಕರಾದ ಮೀನಾ ಕಪೂರ್ ಹೇಳುತ್ತಾರೆ.
ಹಿಂದುಳಿದವರಿಗೆಲ್ಲ ಮುಂದಿನ ವರ್ಷ ಪ್ರಗತಿದಾಯಕವಾಗಲಿದೆ ಎನ್ನುತ್ತಾರೆ ಖ್ಯಾತ ಜ್ಯೋತಿಷಿ ಬೇಜಾನ್ ದಾರೂವಾಲಾ. "2008ಕ್ಕಿಂತಲೂ 2009 ಉತ್ತಮವಾಗಿರುತ್ತದೆ. ಏಪ್ರಿಲ್ ತಿಂಗಳಲ್ಲಿ ಗುರುವು ಕುಂಭಕ್ಕೆ ಪ್ರವೇಶಿಸುತ್ತಾನೆ. ಇದು ಜನ ಸಾಮಾನ್ಯರ ಅಭಿವೃದ್ಧಿಗೆ ಪೂರಕ ಎನ್ನುತ್ತಾರೆ ಅವರು. ಧನ, ಪ್ರಗತಿ ಮತ್ತು ಸಮೃದ್ಧಿಯ ದ್ಯೋತಕವಾಗಿರುವ ಗುರುವು ಕುಂಭ ರಾಶಿಗೆ ಪ್ರವೇಶಿಸಿದಾಗ, ಹಣಕಾಸು ಸ್ಥಿತಿಗತಿ ಸುಧಾರಣೆಯಾಗುತ್ತದೆ ಮತ್ತು ದೇಶಕ್ಕೆ ಎದುರಾಗುವ ಭದ್ರತಾ ಸಮಸ್ಯೆಗಳೂ ಕಡಿಮೆಯಾಗುತ್ತವೆ ಎನ್ನುತ್ತಾರೆ.
ಭದ್ರತೆ/ರಕ್ಷಣೆಯ ಪ್ರತಿನಿಧಿಯಾಗಿರುವ ಶನಿ ಮತ್ತು ದಿಢೀರ್ ಪ್ರಕೋಪದ ಪ್ರತಿನಿಧಿಯಾಗಿರುವ ಯುರೇನಸ್ ಗ್ರಹವು ಕಳೆದ ವರ್ಷ (2008) ಕೆಟ್ಟ ಸ್ಥಿತಿಯಲ್ಲಿದ್ದವು. 2009ರಿಂದ ಈ ಪರಿಸ್ಥಿತಿ ಉತ್ತಮವಾಗುತ್ತದೆ ಎಂದು 78ರ ಹರೆಯದ ದಾರೂವಾಲಾ ಹೇಳಿದ್ದಾರೆ.
ತೀರಾ ಇತ್ತೀಚೆಗೆ ಮುಂಬಯಿ ಮೇಲೆ ನಡೆದ ಭಯೋತ್ಪಾದನಾ ದಾಳಿಯೂ ಸೇರಿದಂತೆ ಸರಣಿ ಭಯೋತ್ಪಾದನಾ ದಾಳಿಗಳು, ಆರ್ಥಿಕ ಬಿಕ್ಕಟ್ಟು, ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದವರಿಗೆ ಆಘಾತ ಇತ್ಯಾದಿಗಳೆಲ್ಲವೂ ಇದೀಗ ಜನರು ಜ್ಯೋತಿಷಿಗಳು, ಹಸ್ತಸಾಮುದ್ರಿಕಾ ತಜ್ಞರು, ಗಿಣಿಶಾಸ್ತ್ರ ಹೇಳುವವರು, ಟ್ಯಾರಟ್ ಕಾರ್ಡ್ ಓದುವವರ ಬಳಿಗೆ ಧಾವಿಸುವಂತೆ ಮಾಡಿದೆ.