ಯಕ್ಷಗಾನದ್ದೇ ಕುಟುಂಬ ಎಂಬಂತೆ ಇರುವ ಕೀರಿಕ್ಕಾಡು ಮಾಸ್ತರರ ಮನೆತನದಲ್ಲಿ ಅವರ ಮಗ ವೈದ್ಯವೃತ್ತಿಯ ಡಾ. ರಮಾನಂದ ಬನಾರಿಯವರು ಅರ್ಥಗಾರಿಕೆಯಲ್ಲಿ ವಿಜೃಂಭಿಸುವವರು. ಚಾಟೂಕ್ತಿಯ ಮಾತುಗಳನ್ನು ಬಳಸಿ ಪುರಾಣದ ಪಾತ್ರಗಳನ್ನು ಅನಾವರಣಗೊಳಿಸುವಲ್ಲಿ ಅವರು ಸಿದ್ಧಹಸ್ತರು. ಇನ್ನು ಅವರ ಸಹೋದರ ವಿಶ್ವವಿನೋದ ಬನಾರಿಯವರು ಸ್ವತಃ ಭಾಗವತರಾಗಿ ಅನೇಕ ಮಂದಿ ಶಿಷ್ಯಂದಿರನ್ನು ಸಿದ್ಧಗೊಳಿಸುತ್ತಿರುವವರು. ಇನ್ನೊಬ್ಬ ಪುತ್ರ ಮನಮೋಹನ ಬನಾರಿಯವರು ನ್ಯಾಯಾಧೀಶರ ವೃತ್ತಿಯಲ್ಲಿದ್ದರೂ ಯಕ್ಷಗಾನದ ಅರ್ಥಗಾರಿಕೆಯಲ್ಲಿ ಪಳಗಿದವರು. ಇವರೆಲ್ಲರ ಹಿರಿಯಣ್ಣ ವನಮಾಲ ಕೇಶವ ಭಟ್ಟರು ಗೋಪಾಲಕೃಷ್ಣ ದೇವರ ಅರ್ಚನೆಯೊಂದಿಗೆ ಸಂಘದ ಅಧ್ಯಕ್ಷರಾಗಿ ಆಧಾರ ನೀಡುತ್ತಿದ್ದಾರೆ. ಮಾಸ್ತರರ ಮೊಮ್ಮಗ ಕುಮಾರಸುಬ್ರಹ್ಮಣ್ಯ ವಳಕುಂಜ ಇವರು ಒಬ್ಬ ಪ್ರಸಿದ್ಧ ಯಕ್ಷಗಾನ ಹಿಮ್ಮೇಳವಾದಕರಾಗಿ ಅನೇಕ ಮಂದಿ ಶಿಷ್ಯಂದಿರನ್ನು ರೂಪಿಸುತ್ತಿದ್ದಾರೆ. ವಿಶ್ವವಿನೋದ ಬನಾರಿಯವರ ಸೊಸೆ ಕಲಾವಿದೆಯಾಗಿದ್ದು ಆಕೆಗೆ ವೇಷಧಾರಿಯಾಗಿ ಮುಂದುವರಿಯಲು ಪ್ರೋತ್ಸಾಹ ನೀಡುತ್ತಿದ್ದಾರಲ್ಲದೆ ಅವರ ಮಗನೂ ಸಂಘಟನೆಯಲ್ಲಿ ನೆರವಾಗುತ್ತಿದ್ದಾನೆ.
ಇದಲ್ಲದೆ ಪರಿಣತ ಕಲಾವಿದರನ್ನು ದೇಲಂಪಾಡಿಯಂತಹ ಹಳ್ಳಿಗೆ ಕರೆಸಿ ಯಕ್ಷಗಾನದ ವಿವಿಧ ಅಂಗಗಳ ತರಬೇತಿಗೆ ವ್ಯವಸ್ಥೆ ಮಾಡುತ್ತಾರೆ. ಪರಂಪರೆಯಂತೆ ಪ್ರತಿತಿಂಗಳೂ ನಿಶ್ಚಿತವಾದ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಅಂತೆಯೇ ಪ್ರತಿ ವರ್ಷ ಅದ್ದೂರಿಯಾದ ವಾರ್ಷಿಕೋತ್ಸವವೂ ಜರಗುತ್ತದೆ. ಕಲಾವಿದರಿಗೆ ಸನ್ಮಾನ, ಪ್ರಶಸ್ತಿ ಪುರಸ್ಕಾರ ಇತ್ಯಾದಿ ಕಾರ್ಯಕ್ರಮಗಳನ್ನು ಕೂಡಾ ಈ ಸಂಘ ಇತ್ತೀಚೆಗೆ ಸೇರಿಸಿಕೊಂಡಿದೆ. ಅರುವತ್ತನೇ ವರ್ಷಾಚರಣೆಯಾಗಿ ಆಚರಿಸಿದ ವಜ್ರ ಮಹೊತ್ಸವದ ಸಂದರ್ಭದಲ್ಲಿ ಸ್ಥಾಪಿಸಿದ "ಕೀರಿಕ್ಕಾಡು ಪ್ರಶಸ್ತಿ"ಯನ್ನು ಅವರ ಶಿಷ್ಯ ಶೇಣಿ ಗೋಪಾಲಕೃಷ್ಣ ಭಟ್ಟರಿಗೆ ಪ್ರದಾನ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಸುಭದ್ರವಾದ ಸಭಾ ಭವನ ಹಾಗೂ ರಂಗವೇದಿಕೆ ನಿರ್ಮಾಣಗೊಂಡಿದೆ. ವಜ್ರ ಪತ್ರ ಎಂಬ ಸಂಸ್ಮರಣ ಗ್ರಂಥವನ್ನು ಹೊರತಂದಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಪ್ರವರ್ಧಮಾನವಾಗಿ ಬನಾರಿ ಗೋಪಾಲಕೃಷ್ಣ ಯಕ್ಷಗಾನ ಸಂಘವು ವರ್ಧಿಸುತ್ತಿರುವುದು ಯಕ್ಷಗಾನ ಪ್ರಪಂಚಕ್ಕೆ ಹೆಮ್ಮೆಯ ವಿಷಯವಾಗಿದೆ.
- ಡಾ. ಚಂದ್ರಶೇಖರ ದಾಮ್ಲೆ, ಸುಳ್ಯ
[ ಲೇಖಕರ ಪರಿಚಯ: ಡಾ. ಚಂದ್ರಶೇಖರ ದಾಮ್ಲೆಯವರು ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದು ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಳ್ಯದಲ್ಲಿ ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆಯನ್ನು ಸ್ಥಾಪಿಸಿ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಇವರು ಕೀರಿಕ್ಕಾಡು ಕುಟುಂಬದೊಂದಿಗೆ ಆತ್ಮೀಯರಾಗಿದ್ದಾರೆ.]