ಭುಜ ನೋವು; ಏಕದಿನ ಸರಣಿಯಿಂದ ಸೆಹ್ವಾಗ್ ಔಟ್
ಡರ್ಬನ್ , ಗುರುವಾರ, 30 ಡಿಸೆಂಬರ್ 2010 (13:59 IST)
ಡರ್ಬನ್: ಟೆಸ್ಟ್ ಸರಣಿಯ ನಂತರ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾ ಬಹುದೊಡ್ಡ ಆಘಾತ ಅನುಭವಿಸಿದ್ದು, ಭುಜ ನೋವಿಗೊಳಗಾಗಿರುವ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಮಹತ್ವದ ಸರಣಿಗೆ ಅಲಭ್ಯರಾಗಿದ್ದಾರೆ. ಜನವರಿ 12ರಿಂದ ಆರಂಭವಾಗಲಿರುವ ಏಕದಿನ ಸರಣಿಯಲ್ಲಿ ಸೆಹ್ವಾಗ್ ಸ್ಥಾನವನ್ನು ಮುಂಬೈ ಮಧ್ಯಮ ಕ್ರಮಾಂಕದ ಆಟಗಾರ ರೋಹಿತ್ ಶರ್ಮಾ ತುಂಬಲಿದ್ದಾರೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಇದೇ ತೊಂದರೆ ಅನುಭವಿಸಿದ್ದ ವೀರೂ ಫಿಟ್ನೆಸ್ ಮರಳಿ ಪಡೆಯುವ ಮೂಲಕ ತಂಡಕ್ಕೆ ವಾಪಾಸಾಗಿದ್ದರು. ಆದರೆ ಇದೀಗ ಮತ್ತದೇ ಸಮಸ್ಯೆ ಕಾಡ ತೊಡಗಿದೆ. ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್ದುನಿಯಾಕ್ಕೆ ಭೇಟಿ ಕೊಡಿ
ಅದೇ ಹೊತ್ತಿಗೆ ತಂಡದ 17ನೇ ಆಟಗಾರನಾಗಿ ಮುರಳಿ ವಿಜಯ್ ಅವರನ್ನು ದಕ್ಷಿಣ ಆಫ್ರಿಕಾದಲ್ಲೇ ಉಳಿದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಎನ್. ಶ್ರೀನಿವಾಸನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಸ್ತುತ ವಿಜಯ್ ಅವರು ಟೆಸ್ಟ್ ತಂಡದಲ್ಲಿದ್ದಾರೆ. ಭುಜ ನೋವಿನಿಂದಾಗಿ ಇದೇ ವರ್ಷ ಮೇ ತಿಂಗಳಲ್ಲಿ ನಡೆದ ಐಸಿಸಿ ಟ್ವೆಂಟಿ-20 ವಿಶ್ವಕಪ್ನ ಮಹತ್ವದ ಟೂರ್ನಿಗೂ ಸೆಹ್ವಾಗ್ ಅಲಭ್ಯರಾಗಿದ್ದರು. ಜಿಂಬಾಬ್ವೆ ಪ್ರಸಾದಿಂದಲೂ ವಂಚಿತರಾಗಿದ್ದ ವೀರೂ ಗಾಯದ ಹಿನ್ನೆಲೆಯಲ್ಲಿಯೇ ಏಷ್ಯಾ ಕಪ್ನ ಫೈನಲ್ ಪಂದ್ಯದಲ್ಲೂ ಆಡಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಸೆಹ್ವಾಗ್ ಅವರಿಗೆ ವಿಶ್ರಾಂತಿ ಸೂಚಿಸಲಾಗಿದೆ. ಇದೀಗ ಸೆಹ್ವಾಗ್ ಅನುಪಸ್ಥಿತಿಯಲ್ಲಿ ಗೌತಮ್ ಗಂಭೀರ್ ಮತ್ತು ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಕಳೆದ ಕೆಲವು ಏಕದಿನ ಸರಣಿಗಳಿಂದ ಹೊರಗುಳಿದಿದ್ದ ಸಚಿನ್, ವಿಶ್ವಕಪ್ಗಿಂತ ಮೊದಲು ನಡೆಯಲಿರುವ ಕೊನೆಯ ಏಕದಿನ ಸರಣಿಯಲ್ಲಿ ಆಡಲು ನಿರ್ಧರಿಸಿದ್ದರು. ಅದೇ ಹೊತ್ತಿಗೆ ಕೇಪ್ಟೌನ್ನಲ್ಲಿ ನಡೆಯಲಿರುವ ನಿರ್ಣಾಯಕ ಟೆಸ್ಟ್ನಲ್ಲಿ ಸೆಹ್ವಾಗ್ ಆಡುವ ಭರವಸೆಯನ್ನು ತಂಡ ಹೊಂದಿದೆ.