Publish Date: Mon, 21 Apr 2008 (11:50 IST)
Updated Date: Mon, 21 Apr 2008 (11:46 IST)
ಸಮೀಕ್ಷೆ: ರವಿಪ್ರಕಾಶ್ ರೈ (ನ್ಯೂಸ್ ರೂಂ)
ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಭಾರೀ ಕುತೂಹಲವನ್ನು ಕೆರಳಿಸಿದೆ. ಇಲ್ಲಿ ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ. ಬೇರೆ ಪಕ್ಷಗಳು ಇಲ್ಲಿ ಸ್ಪರ್ಧಿಸಿದರೂ ಅದು ಲೆಕ್ಕಕ್ಕೆ ಮಾತ್ರ. ಕಳೆದ 19 ವರ್ಷಗಳಿಂದ ಕಾಂಗ್ರೆಸ್ನ ಭದ್ರ ಕೋಟೆಯಾದ ಬಂಟ್ವಾಳ ಪಾಳಯಕ್ಕೆ ಮೊಟ್ಟ ಮೊದಲು ಲಗ್ಗೆ ಇಟ್ಟು ಜಯಿಸಿದವರು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ. ಇದರಿಂದ ಮೊದಲ ಬಾರಿಗೆ ಬಂಟ್ವಾಳದಲ್ಲಿ ಬಿಜೆಪಿ ಆಸ್ತಿತ್ವಕ್ಕೆ ಬಂದಂತಾಯಿತು. ಈ ಹಿಂದೆ ಕಾಂಗ್ರೆಸ್ನ ಬಿ. ರಮಾನಾಥ್ ರೈ ವಿರುದ್ದ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಗಳ್ಯಾರೂ ಆರ್ಥಿಕವಾಗಿ ಪ್ರಬಲರಾಗಿರಲಿಲ್ಲ. ಆದರೆ ಶಿಪ್ಪಿಂಗ್ ಏಜೆನ್ಸಿ ನಡೆಸುತ್ತಿದ್ದ ನಾಗರಾಜ ಶೆಟ್ಟಿ ಆರ್ಥಿಕವಾಗಿ ಸಾಕಷ್ಟು ಪ್ರಬಲ ವ್ಯಕ್ತಿ.
ರಮಾನಾಥ ರೈ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದರೂ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದರ ಜೊತೆಗೆ ಆ ಸಮಯದಲ್ಲಿ ನಡೆದ ಸಾಕಷ್ಟು ಹಿಂದೂ ಸಮಾವೇಶಗಳು ನಡೆದ ಕಾರಣದಿಂದಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದೆ. ಹಿಂದೆ ಕ್ಯಾಂಪ್ಕೋ ಅಧ್ಯಕ್ಷರಾಗಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿ ಶಾಸಕರಾಗಿ ಸಚಿವರೂ ಆದ ನಾಗರಾಜ ಶೆಟ್ಟಿ ನಂತರದ ದಿನಗಳಲ್ಲಿ ಕ್ಷೇತ್ರಕ್ಕೆ ಹೆಚ್ಚಿನದ್ದೇನೂ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಕಾಂಗ್ರೆಸ್ನ ರಮಾನಾಥ ರೈ ಬಂಟ್ವಾಳದಲ್ಲಿ ನಂತರದ ದಿನಗಳಲ್ಲಿ ತಮ್ಮ ಛಾಪನ್ನು ಹೆಚ್ಚಿಸಿಕೊಂಡರು. ಇಲ್ಲಿ ಯಾವುದೇ ಜಾತಿ ರಾಜಕೀಯಕ್ಕೆ ಅವಕಾಶವಿಲ್ಲ. ಇಬ್ಬರೂ ಬಂಟ ಸಮುದಾಯದಿಂದ ಬಂದವರಾದ್ದರಿಂದ ಇಲ್ಲಿ ಜಾತಿ ಆಧಾರದಲ್ಲಿ ಮತ ವಿಂಗಡನೆಯಾಗುವುದಿಲ್ಲ ಇಲ್ಲೇನಿದ್ದರೂ ಪಕ್ಷಗಳ ನಡುವೆ ನೇರ ಹಣಾಹಣಿ.
ಬಿಜೆಪಿಯ ನಾಗರಾಜ ಶೆಟ್ಟಿ ಇತ್ತೀಚೆಗೆ ಹೆಂಚನ್ನು ವಿತರಿಸಲು ಹೋಗಿ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಒಳಗಾಗಿದ್ದಾರೆ. ಮರುದಿನವೇ ಕಾಂಗ್ರೆಸ್ನ ರಮಾನಾಥ ರೈ ಪತ್ರಿಕಾಗೋಷ್ಠಿ ಕರೆದು, ತಾವು ಯಾವುದೇ ಕೆಲಸ ಮಾಡದೇ ಸೋಲುವ ಭೀತಿಯಿಂದ ಈ ರೀತಿ ಹಂಚು ವಿತರಿಸಲು ಹೊರಟ್ಟಿದಾರೆ ಎಂದು ಹೇಳುವ ಮೂಲಕ ತಮ್ಮ ಪ್ರತಿಸ್ಪರ್ಧಿ ನಾಗರಾಜ ಶೆಟ್ಟಿ ವಿರುದ್ಧ ಚುನಾವಣಾ ವಾಗ್ದಾಳಿ ನಡೆಸಿದ್ದಾರೆ.
ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಎಲ್ಲರಿಗೂ ಖಚಿತವಾಗಿತ್ತು. ಏಕೆಂದರೆ ಬಿಜೆಪಿ ಬಗ್ಗೆ ಮರುಳಾಗಿ ಅನೇಕ ಮುಸ್ಲಿಮರು ಕೂಡಾ ಬಿಜೆಪಿ ಪ್ರವೇಶಿಸಿದ್ದರು. ಆದರೆ ಈ ಬಾರಿ ಬಿಜೆಪಿಗೆ ಗೆಲ್ಲುವ ಸಂಪೂರ್ಣ ವಿಶ್ವಾಸವಿಲ್ಲ. ಕಳೆದ ಬಾರಿ ಕಾರ್ಯಕರ್ತರು ಉತ್ಸುಕರಾಗಿದ್ದಷ್ಟು ಈ ಬಾರಿ ಉತ್ಸುಕರಾಗಿಲ್ಲ. ಇದರಿಂದ ಈ ಬಾರಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಸುಲಭದ ಶ್ರಮ ಸಾಕಾಗದು ಎಂಬುದು ಪರಿಗಣಿಸಬೇಕಾದ ಅಂಶ. ರಮಾನಾಥ ರೈ ತಾವು ಸೋತ ದಿನದಿಂದ ತಮ್ಮ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೆ ಇಲ್ಲಿ ಸುಲಭದ ಜಯ ಎರಡೂ ಪಕ್ಷಕ್ಕೂ ಸಾಧ್ಯವಿಲ್ಲ. ಅದಕ್ಕಾಗಿ ಏನೇನೋ ಗಿಮಿಕ್ ಮಾಡಲು ಪಕ್ಷಗಳು ಆರಂಭಿಸಿವೆ.