ವಿಶ್ವಾದ್ಯಂತ ವೀಕ್ಷಕರ ಮನಗೆದ್ದು ಧಾರ್ಮಿಕ ಭಾವನೆಗಳನ್ನು ಉದ್ದೀಪನಗೊಳಿಸಿದ್ದ "ರಾಮಾಯಣ" ಮತ್ತೊಮ್ಮೆ ಕಿರುತೆರೆಯಲ್ಲಿ ಬರಲಿದೆ. ಆದರೆ ಇದು ಸಂಪೂರ್ಣ ರಾಮಾಯಣವಲ್ಲ, ಇದು 'ಸೀತಾಯಣ'!
ಈ ಸೀತಾಯಣದ ಕಥನವೇ ಹೊಸ ರಾಮಾಯಣದ ವಿಶಿಷ್ಟ ಲಕ್ಷಣ ಎನ್ನುತ್ತಾರೆ ಮುಂಬರುವ ದಿನಗಳಲ್ಲಿ ಕಿರುತೆರೆಯಲ್ಲಿ ಕಾಣಲಿರುವ ರಾಮಾಯಣದ ನಿರ್ಮಾಪಕ, ನಿರ್ದೇಶಕ ಪ್ರೇಮ್ ಸಾಗರ್.
ಈ ಬಾರಿ ರಾಮಾಯಣದಲ್ಲಿ ವಿಶೇಷ ಕಥನ ಒಳ್ಳಗೊಳ್ಳಲಿದೆ. ಅದೆಂದರೆ ಹಿಂದಿನದರಲ್ಲಿ ತಪ್ಪಿಹೋಗಿದ್ದ ಸೀತೆಯ ಬಾಲ್ಯದ ಬದುಕು ಎಂದು ದೂರದರ್ಶನದ "ರಾಮಾಯಣ" ನಿರ್ದೇಶಕ ರಮಾನಂದ ಸಾಗರ್ ಅವರ ಪುತ್ರ ಪ್ರೇಮ್ ಸಾಗರ್. 1980ರ ದಶಕದಲ್ಲಿ ರಮಾನಂದ ಸಾಗರರ ರಾಮಾಯಣ ದೂರದರ್ಶನಕ್ಕೆ ಕೋಟ್ಯಂತರ ವೀಕ್ಷಕರನ್ನು ಸೆಳೆದಿತ್ತು.
ಹಳೆಯ ರಾಮಾಯಣ ಕಥನದಲ್ಲಿ ಆರ್ಥಿಕ ಸಂಪನ್ಮೂಲಗಳ ಕೊರತೆಯೊಂದಿಗೆ ತಂತ್ರಜ್ಞಾನದ ಬೆಳವಣಿಗೆಯೂ ಸೀಮಿತವಾಗಿತ್ತು. ಈ ಬಾರಿ ಅದು ತೀರಾ ಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ ಜೂನಿಯರ್ ಸಾಗರ್.
ಅತ್ಯಾಧುನಿಕ ತಂತ್ರಜ್ಞಾನಗಳು, ಹೊಸ ತಾರಾಸಮೂಹಗಳ ಹೊರತಾಗಿ, ಈ ಬಾರಿ ಇದಕ್ಕಾಗಿ ನಿರ್ಮಿಸಲಾದ ಸೆಟ್ ಕೂಡ ಕಳೆದ ಬಾರಿಗಿಂತ ತುಂಬಾ ದೊಡ್ಡದು ಎಂದಿರುವ ಪ್ರೇಮ್ ಸಾಗರ್, ದೃಶ್ಯಗಳಿಗೆ ಹೆಚ್ಚಿನ ಜೀವಂತಿಕೆ ನೀಡಲು ಲಂಕೆ ಮತ್ತು ಅಯೋಧ್ಯೆಗೆ ಪ್ರತ್ಯೇಕ ಸೆಟ್ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
20 ವರ್ಷಗಳ ಹಿಂದೆ ಸೆಳೆದುಕೊಂಡ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಸೆಳೆಯುವುದು ಸುಲಭವಲ್ಲ. ಅತ್ತೆ-ಸೊಸೆ ರಾಮಾಯಣಕ್ಕಿಂತ ಇಂಥ ಆಧ್ಯಾತ್ಮಿಕ ಕಥನಗಳನ್ನು ನೋಡಲು ಇಚ್ಛಿಸುವ ವೀಕ್ಷಕರೂ ಈಗ ಇದ್ದಾರೆ ಎಂದಿರುವ ಅವರು, ಖಾಸಗಿ ಚಾನೆಲ್ಗಳ ಲಭ್ಯತೆ ವಿಸ್ತಾರವು ಇನ್ನೂ ಉನ್ನತ ಮಟ್ಟಕ್ಕೇರಿಲ್ಲ ಎಂದೂ ಸೇರಿಸಿದ್ದಾರೆ.