Publish Date: Tue, 06 May 2014 (18:31 IST)
Updated Date: Tue, 06 May 2014 (18:39 IST)
ಲಲಿತ್ ಮೋದಿ ಅವರು ರಾಜಸ್ಥಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿ ನೇಮಕವಾದ ಕೆಲವೇ ಗಂಟೆಗಳಲ್ಲಿ ಬಿಸಿಸಿಐ ರಾಜಸ್ಥಾನ್ ರಾಯಲ್ಸ್ ಕ್ರಿಕೆಟ್ ಸಂಸ್ಥೆಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ ಕ್ರಿಕೆಟ್ ವ್ಯವಹಾರಗಳ ನಿರ್ವಹಣೆಗೆ ತಾತ್ಕಾಲಿಕ ಸಮಿತಿಯನ್ನು ನೇಮಿಸಿದೆ. ಬಿಸಿಸಿಐ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಆರ್ಸಿಎಗೆ ನಿಷೇಧಿಸಲಾಗಿದೆ.
ಬಿಸಿಸಿಐ ನಿಯಮಾವಳಿಗೆ ಬದ್ಧವಾಗಿಲ್ಲದ ಸಂಸ್ಥೆಯನ್ನು ಅಮಾನತುಗೊಳಿಸುವ ಹಕ್ಕು ಅಧ್ಯಕ್ಷರಿಗೆ ಇದ್ದು, ಮಧ್ಯಾಂತರ ಅಧ್ಯಕ್ಷ ಶಿವಲಾಲ್ ಯಾದವ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದರು.
ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಿರುವ ರಾಜಸ್ಥಾನ ಆಟಗಾರರಿಗೆ ಇದರಿಂದ ತೊಂದರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಬಿಸಿಸಿಐ ಆಟಗಾರ ಪರ ಸಂಸ್ಥೆಯಾಗಿದೆ. ರಾಜಸ್ಥಾನದಲ್ಲಿ ಕ್ರಿಕೆಟ್ ನಿರ್ವಹಣೆಗೆ ತಾತ್ಕಾಲಿಕ ಸಂಸ್ಥೆಯನ್ನು ರಚಿಸುತ್ತೇವೆ. ಇವು ಆಟಗಾರರ ಹಿತಾಸಕ್ತಿಯನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.ಕಳೆದ ವರ್ಷ ಡಿಸೆಂಬರ್ನಲ್ಲಿ ಆರ್ಸಿಎಗೆ ಚುನಾವಣೆ ನಡೆದಿದ್ದು, ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನಲೆಯಲ್ಲಿ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ಸಾಕಷ್ಟು ಚರ್ಚೆ ಬಳಿಕ ಮಂಗಳವಾರ ಕೋರ್ಟ್ ನೇಮಿಸಿದ ವೀಕ್ಷಕರು ಫಲಿತಾಂಶ ಪ್ರಕಟಿಸಿದಾಗ ನಿರೀಕ್ಷೆಯಂತೆ ಲಲಿತ್ ಮೋದಿ 33 ಮತಗಳ ಪೈಕಿ 24 ಮತಗಳನ್ನು ಪಡೆದು ಭರ್ಜರಿ ಅಂತರದಿಂದ ಜಯಗಳಿಸಿದ್ದರು. ಅವರ ಪ್ರತಿಸ್ಪರ್ಧಿ ರಾಮಪಾಲ್ ಶರ್ಮಾ ಕೇವಲ 5 ಮತಗಳನ್ನು ಪಡೆದಿದ್ದರು.ಕಳೆದ ನಾಲ್ಕು ವರ್ಷಗಳಿಂದ ಲಂಡನ್ನಲ್ಲಿ ವಾಸಿಸುತ್ತಿದ್ದ ಲಲಿತ್ ಮೋದಿ ಅವರಿಗೆ ಡಿ. 19ರಂದು ನಡೆದ ಆರ್ಸಿಎ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.